Search...

ಶಿಕ್ಷಣ ಯೋಗಿ ಪ್ರೊ. ಎಂ.ಆರ್‌.ದೊರೆಸ್ವಾಮಿಯವರಿಗೆ ಕಾಯಕಯೋಗಿ ಪುರಸ್ಕಾರ

ಶಿಕ್ಷಣ ಯೋಗಿ ಪ್ರೊ. ಎಂ.ಆರ್‌.ದೊರೆಸ್ವಾಮಿಯವರಿಗೆ ಕಾಯಕಯೋಗಿ ಪುರಸ್ಕಾರ

ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ, ರಾಜ್ಯ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರರು, ಮಾಜಿ ಎಂಎಲ್‌ಸಿ ಪ್ರೊ.ಎಂ.ಆರ್‌. ದೊರೆಸ್ವಾಮಿ ಅವರಿಗೆ ವಿಸ್ತಾರನ್ಯೂಸ್‌ ಲೋಕಾರ್ಪಣೆ ಸಮಾರಂ೦ಭದಲ್ಲಿ (vistara news launch) ಕಾಯಕಯೋಗಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಅವರ ಕಿರುಪರಿಚಯ ಇಲ್ಲಿದೆ. ನಾಡಿನ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಪಿಇಎಸ್‌ ಅನ್ನು ಶೂನ್ಯದಿಂದಲೇ ಕಟ್ಟಿ ಉನ್ನತ್ಯದವರೆಗೆ ಕೊ೦ಡೊಯ್ದವರು ಪ್ರೊ. ಎಂ. ಆರ್‌. ದೊರೆಸ್ವಾಮಿ.

ಕೃಷಿ ಕುಟುಂಬದಲ್ಲಿ ಜನಿಸಿದ ಇವರು ವಿಶ್ವ ಮಟ್ಟದಲ್ಲೇ ಪ್ರಸಿದ್ಧ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿರುವುದು ಅವರ ಕರ್ತೃತ್ವ ಶಕ್ತಿಯ ದ್ಯೋತಕ ಮತ್ತು ಸಮಾಜದ ಕುರಿತ ಕಾಳಜಿಯನ್ನು ತೋರಿಸುತ್ತದೆ. ಇದರ ಜತೆಗೆ ಅವರು ಸರ್ಕಾರಿ ಶಾಲೆಗಳ ಅಭಿವೃದ್ದಿಗಾಗಿ ನಡೆಸಿರುವ ಪ್ರಯತ್ನವೂ ಐತಿಹಾಸಿಕ.

ಕನ್ನಡದ ಬಗ್ಗೆ ಕಳಕಳಿ, ಕನ್ನಡ ಶಾಲೆಗಳ ಕುರಿತು ಕಾಳಜಿ ಮತ್ತು ಕನ್ನಡ ಶಾಲಾ ಮಕ್ಕಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುವ ಇವರು ಇವುಗಳ ಅಭಿವೃದ್ಧಿಗಾಗಿ ಹತ್ತಾರು ಕಾರ್ಯಸಾಧು ಸಲಹೆಗಳನ್ನು ನೀಡಿದ್ದಾರೆ. ಅವರ ಈ ಸೇವೆಯನ್ನು ಇನ್ನಷ್ಟು ಪ್ರಭಾವಿಯಾಗಿಸುವುದಕ್ಕಾಗಿ ರಾಜ್ಯ ಸರ್ಕಾರ ಅವರನ್ನು ಶಿಕ್ಷಣ ಸುಧಾರಣೆಗಳ ಸಲಹೆಗಾರರನ್ನಾಗಿ ನೇಮಕ ಮಾಡಿದೆ.

ಸರ್ಕಾರಕ್ಕೆ ಸಲಹೆ ನೀಡುವುದರ ಜತೆಜತೆಗೆ ತಾವೇ ಸುಮಾರು 40 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಆಮೂಲಾಗ್ರ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಶಿಕ್ಷಣ ಯೋಗಿ ಪ್ರೊ. ಎಂ.ಆರ್‌. ದೊರೆಸ್ವಾಮಿ ಅವರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.